EntertainmentPosted at: Feb 23 2021 12:56PM Shareಅಪಮಾನಿಸಬೇಡಿ: ದರ್ಶನ್ ಫ್ಯಾನ್ಸ್, ಖಾಸಗಿ ಮಾಧ್ಯಮವೊಂದರ ವರ್ತನೆಗೆ ಜಗ್ಗೇಶ್ ಆಕ್ರೋಶಬೆಂಗಳೂರು, ಫೆ 23 (ಯುಎನ್ಐ) ಮೈಸೂರು ಜಿಲ್ಲೆ ಬನ್ನೂರಿನಲ್ಲಿ ನಡೆದ ಘಟನೆ ಹಾಗೂ ಖಾಸಗಿ ಮಾಧ್ಯಮವೊಂದು ತಮ್ಮ ಬಗ್ಗೆ ಮಾಡಿರುವ ಅಪಮಾನದ ಬಗ್ಗೆ ನಟ ಜಗ್ಗೇಶ್, ತೀವ್ರ ಆಕ್ರೋಶ, ಬೇಸರ ವ್ಯಕ್ತಪಡಿಸಿದ್ದಾರೆ. ದೀಕ್ಷೆ ಪಡೆದುಕೊಂಡು, ಮಠ, ಮಂದಿರ, ನಟನೆ, ಸಂಸಾರ, ಕನ್ನಡ, ಕನ್ನಡಿಗರು ಎಂದು ನನ್ನ ಪಾಡಿಗೆ ಇದ್ದೇನೆ. ಆದಾಗ್ಯೂ, ರೌಡಿಸಂಗೆ ಪ್ರಚೋದನೆ ನೀಡುವ ರೀತಿಯಲ್ಲಿ 58 ವರ್ಷದ ನನ್ನನ್ನು ಖಾಸಗಿ ಮಾಧ್ಯಮವೊಂದು ಅಪಮಾನಿಸಿದೆ ಎಂದು ಟ್ವಿಟರ್ ಮೂಲಕ ಜಗ್ಗೇಶ್ ಹೇಳಿದ್ದಾರೆ. “ಬನ್ನೂರಿನಲ್ಲಿ ಉದ್ರೇಕಗೊಂಡಿದ್ದ 20ಕ್ಕೂ ಹೆಚ್ಚು ಜನರು ದರ್ಶನ್ ಫ್ಯಾನ್ಸ್ ಹೆಸರಿನಲ್ಲಿ ಬಂದು ನನ್ನ ಜಾತಿ ಬಗ್ಗೆ ಮಾತನಾಡಿದರು. ಅಂತಹ ಸಂದರ್ಭದಲ್ಲಿ ನಾನೊಬ್ಬನೇ ಏನು ಮಾಡಬಹುದಿತ್ತು? ಆದರೂ ಓಡಿಹೋಗದೆ ಎದುರಿಸಲಿಲ್ಲವೇ. ಆ ಸಂದರ್ಭವನ್ನು ಖಾಸಗಿ ಚಾನಲ್ ಒಂದು ‘ಕಾಗೆ ಹಾರಿಸಿದ್ದಾರೆ’ ಎಂದು ಹೇಳುವುದು ಎಷ್ಟರಮಟ್ಟಿಗೆ ಸರಿ?” ಕಾಗೆ ಹಾರಿಸುವುದಿದ್ದರೆ ರಾಜಕಾರಣದಲ್ಲಿ ಬೇಕಾದ ಸ್ಥಾನ ಪಡೆಯಬಹುದಿತ್ತು. ಆದರೆ ಯಾರ ಬೂಟನ್ನೂ ನೆಕ್ಕುವ ಮನಃಸ್ಥಿತಿ ನನ್ನದಲ್ಲ" ಎಂದಿದ್ದಾರೆ. “ಡಾ. ರಾಜಕುಮಾರ್, ವಿಷ್ಣುವರ್ಧನ್, ಅಂಬರೀಶ್ ಹೋದ ಬಳಿಕ ಕನ್ನಡದ ಸ್ವಾಭಿಮಾನ ಹಾಳಾಗಿದೆ. ಚಿತ್ರರಂಗದ ಹಿರಿಯರಾಗಿ ನಾನು, ಶಿವರಾಜ್ ಕುಮಾರ್, ರಮೇಶ್ ಉಳಿದ್ದೇವೆ. ಮುಂದೆ ವಿಧಿವಶರಾದ ಬಳಿಕ ತಿಥಿ ಮಾಡಿ ಆನಂದಪಡಿ” ಎಂದು ಕೋಪ, ನೋವು ಮಿಶ್ರಿತ ಭಾವನೆ ಹೊರಹಾಕಿದ್ದಾರೆ. ಪುಂಡಾಟಿಕೆಗೆ ಯಾರೂ ಕುಮ್ಮಕ್ಕು ನೀಡಬಾರದು. ನಾನು ಚಿತ್ರೋದ್ಯಮಕ್ಕೆ ಇನ್ನೂ ಹತ್ತಾರು ವರ್ಷ ಕೆಲಸ ಮಾಡಬೇಕು ಎಂದಿರುವೆ. ಒಬ್ಬ ನಟ ಅಥವಾ ಆತನ ಅಭಿಮಾನಿಗಳು ನನಗೆ ಬುದ್ಧಿ ಕಲಿಸಲು ಸಾಧ್ಯವಿಲ್ಲ. ರಾಯರು ಹಾಗೂ ಕೋಟ್ಯಂತರ ಕನ್ನಡಿಗರಿದ್ದಾರೆ ಎಂದಿದ್ದಾರೆ. ಚಿತ್ರೋದ್ಯಮದ ಬಗ್ಗೆಯೂ ಮಾತನಾಡುತ್ತಾ, ಈ ಹಿಂದೆ ಇದ್ದಂತಹ ವಾತಾವರಣ ಉದ್ಯಮದಲ್ಲಿಲ್ಲ. ತಾನೊಬ್ಬನೇ ಬೆಳೆಯಬೇಕು ಎಂದು ಉಳಿದವರನ್ನು ತುಳಿಯುವ ಕೆಲಸವಾಗುತ್ತಿದೆ. ಇಂತಹವರಿಗೆ ಪ್ರಚೋದಿಸಬೇಡಿ. ಒಂದು ಕಾಲದಲ್ಲಿ ನನ್ನನ್ನು ಬೆಳೆಸಿದ ಮಾಧ್ಯಮದವರಿಗೆ ಗೌರವ ನೀಡುತ್ತಿದ್ದೇನೆ. ಆದರೆ ಈಗಾಗುತ್ತಿರುವ ಬೆಳವಣಿಗೆ ಅನರ್ಥಕ್ಕೆ ಹಾದಿಯಾಗುತ್ತದೆ. ನನ್ನ ಹೆಸರಿನಲ್ಲಿಯೂ 112 ಅಭಿಮಾನಿಗಳ ಸಂಘವಿದೆ. ಅವರು ಯಾರೂ ನನ್ನ ಮೇಲಿನ ಘೇರಾವ್ ಬಗ್ಗೆ ದನಿಯೆತ್ತದಂತೆ ಮನವಿ ಮಾಡಿದ್ದೇನೆ ಎಂದು ತಿಳಿಸಿದ್ದಾರೆ. ಇದಕ್ಕೂ ಮುನ್ನ, 'ಆತ್ಮೀಯರೆ ನನಗೆ ನೀವು ನಿಮಗೆ ನಾನು ಇನ್ನುಮುಂದೆ! ಇನ್ನು ಮುಂದೆ ನನ್ನ ಉದ್ಯಮದ ಯಾರ ಹುಟ್ಟುಹಬ್ಬ, ಸಿನಿಮಾ, ಸ್ನೇಹ, ಕಾರ್ಯಕ್ರಮ, ಭೇಟಿ, ಹರಟೆ ನನ್ನಿಂದ ಇರುವುದಿಲ್ಲ. ಮುಂದೆ ನನ್ನ ಸಿನಿಮಾ, ನನ್ನ ಜೀ ಟಿವಿ ಶೋಗೆ ಮೀಸಲು ಬದುಕು. ಕಾರಣ, ತುಂಬ ತಾಮಸವಾಗಿದೆ ನಮ್ಮ ರಂಗ. ದೊಡ್ಡವರು ಬದುಕಿದ್ದಾಗಲೇ ಅಪಮಾನಿಸಿ ದೊಡ್ಡವರಾಗುವ ಹುನ್ನಾರ ಪುರುಷರ ಸಾಮ್ರಾಜ್ಯ ಆಗಿದೆ ರಂಗ' ಎಂದು ಜಗ್ಗೇಶ್ ಟ್ವೀಟ್ ಮಾಡಿದ್ದರು. ಸೋಮವಾರ ಫೆಬ್ರವರಿ 22ರಂದು ಚಿತ್ರೀಕರಣದಲ್ಲಿ ತೊಡಗಿಕೊಂಡಿದ್ದ ಜಗ್ಗೇಶ್ ಅವರನ್ನು ದರ್ಶನ್ ಅಭಿಮಾನಿಗಳು ತರಾಟೆಗೆ ತೆಗೆದುಕೊಂಡಿದ್ದರು. ಆ ಘಟನೆ ಬಳಿಕ ಜಗ್ಗೇಶ್ ಅವರು ಟ್ವೀಟರ್ ಮೂಲಕ ತಮ್ಮ ಪ್ರತಿಕ್ರಿಯೆ ತಿಳಿಸಿದ್ದಾರೆ. ಚಿತ್ರರಂಗದ ಯಾರೊಂದಿಗೂ ಇನ್ಮುಂದೆ ಹುಟ್ಟುಹಬ್ಬ, ಸಿನಿಮಾ, ಸ್ನೇಹ, ಭೇಟಿ, ಹರಟೆ, ಕಾರ್ಯಕ್ರಮ ಇಟ್ಟುಕೊಳ್ಳುವುದಿಲ್ಲ ಎಂದು ಅವರು ನಿರ್ಧಾರ ತೆಗೆದುಕೊಂಡಿದ್ದಾರೆ. ಒಟ್ಟಾರೆ ಪ್ರಕರಣದ ಬಗ್ಗೆ ಜಗ್ಗೇಶ್ ಅಭಿಮಾನಿಗಳು ಹಲವು ಬಗೆಯಲ್ಲಿ ಪ್ರತಿಕ್ರಿಯೆ ನೀಡುತ್ತಿದ್ದಾರೆ. ಕೆಲವು ಸುದ್ದಿ ವಾಹಿನಿಗಳಲ್ಲಿ ಜಗ್ಗೇಶ್ ಬಗ್ಗೆ ವರದಿ ಪ್ರಸಾರವಾದ ರೀತಿ ಸರಿಯಿಲ್ಲ ಎಂದು ಜಗ್ಗೇಶ್ ಫ್ಯಾನ್ಸ್ ಬೇಸರ ವ್ಯಕ್ತಪಡಿಸಿದ್ದಾರೆ. ಅದಕ್ಕೆ ಉತ್ತರ ನೀಡಿರುವ ಅವರು, 'ಪುಟವಿಟ್ಟಷ್ಟೂ ಚಿನ್ನ ಮಿರುಗುತ್ತದೆ. ಯಾವುದೋ ಕಾಲದಿಂದ ತಪ್ಪಿಲ್ಲಾ ಈ ಅಪಮಾನ. ಆದರೂ ಅದೇ ಅವಮಾನ 6 ಕೋಟಿ ಹೃದಯದಲ್ಲಿ ಅಲುಗದಂತೆ ಕೂರಿಸಿದೆ. ಅಷ್ಟು ಮಾತ್ರ ಸಾಕು. ಅವರಿಗೂ ನನ್ನ ಧನ್ಯವಾದ' ಎಂದಿದ್ದಾರೆ ಜಗ್ಗೇಶ್.ಯುಎನ್ಐ ಎಸ್ಎ 1254