ಬೆಂಗಳೂರು, ನ 20 [ಯುಎನ್ಐ] ಬೆಂಗಳೂರು ನಗರ ಜಿಲ್ಲೆಯಾದ್ಯಂತ ನವೆಂಬರ್ 25 ರಿಂದ ಡಿಸೆಂಬರ್ 10 ರವರೆಗೆ ಕ್ಷಯರೋಗ ಪತ್ತೆ ಆಂದೋಲನ ಹಮ್ಮಿಕೊಳ್ಳಲಾಗಿದೆ ಎಂದು ಅಪರ ಜಿಲ್ಲಾಧಿಕಾರಿ ಶ್ರೀರೂಪ ತಿಳಿಸಿದ್ದಾರೆ.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ, ಸಕ್ರಿಯ ಪ್ರಕರಣ ಪತ್ತೆ ಆಂದೋಲನದ ಮೈಕ್ರೋ ಪ್ಲಾನ್ ಪೂರ್ವ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಕೊಳಚೆ ಪ್ರದೇಶಗಳು, ಜೈಲಿನಲ್ಲಿರುವ ಕೈದಿಗಳು, ವೃದ್ಧಾಶ್ರಮಗಳು, ಕಟ್ಟಡ ನಿರ್ಮಾಣ ಕಾರ್ಮಿಕರು, ನಿರಾಶ್ರಿತರು, ರಾತ್ರಿ ಆಶ್ರಯಗಳು, ಹೆಚ್ಐವಿ ಕೇಂದ್ರಗಳು, ವಸತಿ ಇಲ್ಲದವರು, ಬೀದಿ ಮಕ್ಕಳು, ಅನಾಥ ಆಶ್ರಮಗಳು, ಗಿರಣಿ ಕೆಲಸಗಾರರು, ನೇಕಾರಿಕ ಕಾರ್ಮಿಕರು, ಕಲ್ಲು ಕೊರಯುವವರು ಹಾಗೂ ಅಸಂಘಟಿತ ಕಾರ್ಮಿಕರನ್ನು ಒಳಗೊಂಡ ಹೆಚ್ಚಿನ ಸಾಂಧ್ರತೆಯಿರುವ ಕಡೆ ಪ್ರಚಾರ, ಪತ್ತೆ ಕಾರ್ಯಕ್ರಮ, ಟಿ.ಬಿ ಸೇವೆಗಳನ್ನು ಮನೆ ಬಾಗಿಲಿಗೆ ತಲುಪುವಂತೆ ಮಾಡುವ ಉದ್ದೇಶದಿಂದ ಆಂದೋಲನವನ್ನು ಹಮ್ಮಿಕೊಳ್ಳಲಾಗಿದೆ.
ಜಿಲ್ಲೆಯಲ್ಲಿ ಪ್ರಸಕ್ತ ಸಾಲಿನಲ್ಲಿ 3,796 ರೋಗಿಗಳು ಪತ್ತೆಯಾಗಿದ್ದು, ಕ್ಷಯ ರೋಗಕ್ಕೆ ತುತ್ತಾಗುವ ಒಬ್ಬ ಕ್ಷಯರೋಗಿಯಿಂದ 10-15 ಜನರಿಗೆ ಹರಡುವ ಸಾಧ್ಯತೆಯಿರುವುದರಿಂದ ಸಾರ್ವಜನಿಕರಿಗೆ ಈ ರೋಗದ ಬಗ್ಗೆ ಅರಿವು ಮೂಡಿಸಿ ಚಿಕಿತ್ಸೆ ಪಡೆಯಲು ಪ್ರೋತ್ಸಾಹಿಸಬೇಕು ಎಂದು ಆರೋಗ್ಯ ಇಲಾಖೆಗೆ ಸೂಚಿಸಿದರು.
ಎರಡು ವಾರಕ್ಕಿಂತ ಹೆಚ್ಚು ಸಮಯ ಕೆಮ್ಮು, ಎರಡು ವಾರಕ್ಕಿಂತ ಹೆಚ್ಚು ಜ್ವರ, ಗಣನೀಯವಾಗಿ ತೂಕದ ನಷ್ಟ, ಕಳೆದ 6 ತಿಂಗಳಲ್ಲಿ ಯಾವುದೇ ಸಮಯದಲ್ಲಿ ಕಫದಲ್ಲಿ ರಕ್ತ ಬೀಳುವುದು, ಕಳೆದ 1 ತಿಂಗಳಿನಿಂದ ಎದೆ ನೋವು ಇದ್ದರೆ ಚಿಕಿತ್ಸೆ ಪಡೆಯಬೇಕು ಎಂದರು.
ಸಭೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಗಳಾದ ಡಾ.ಜಿ.ಎ.ಶ್ರೀನಿವಾಸ, ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿಗಳಾದ ಡಾ.ಕುಮಾರ್.ಎಂ.ವಿ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
ಯುಎನ್ಐ ವಿಎನ್ 1935