ಬೆಂಗಳೂರು ಫೆ. 22 (ಯುಎನ್ಐ) ದೇಶದ ಎಲ್ಲ ಕ್ರೀಡಾ ಕೇಂದ್ರಗಳಲ್ಲಿ ತ್ರಿ ತಾರಾ ಹೊಟೆಲ್ ನಂತಹ ಮೂಲ ಸೌಕರ್ಯ ಇರಬೇಕು. ಆ ನಿಟ್ಟಿನಲ್ಲಿ ನಾವು ಸೌಲಭ್ಯ ಕಲ್ಪಿಸಲು ಪ್ರಯತ್ನ ಮಾಡುತ್ತಿದ್ದೇವೆ ಎಂದು ಕೇಂದ್ರ ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವ ಕಿರಣ್ ರಿಜಿಜು ಹೇಳಿದ್ದಾರೆ. ಬೆಂಗಳೂರಿನ ಸಾಯಿ ಸ್ಪೋರ್ಟ್ ಸೆಂಟರ್ ನಲ್ಲಿ 330 ಹಾಸಿಗೆಯ ಕ್ರೀಡಾ ವಸತಿ ನಿಲಯ ಮತ್ತು ಸಿಂಥೆಟಿಕ್ ಟ್ರ್ಯಾಕ್ ನಿರ್ಮಾಣಕ್ಕೆ ಶಂಕುಸ್ಥಾಪನೆ ಮಾಡಿದರು.
ಸಾಯಿ ಸ್ಪೋರ್ಟ್ ಸೆಂಟರ್ ಗೆ ಬಂದಿದ್ದಕ್ಕೆ ಖುಷಿ ಆಗಿದೆ. ಸ್ವಚ್ಛತೆ ಹಾಗೂ ಸೌಂದರ್ಯ ಮುಖ್ಯ. ಈ ಕೇಂದ್ರದಲ್ಲಿ ಏನೇನು ಕೆಲಸ ಆಗಬೇಕಿತ್ತು, ಅದನ್ನು ಮಾಡಿದ್ದೇವೆ. ಬೇಡಿಕೆಗಳನ್ನು ಪೂರೈಸಿದ್ದೇವೆ. ಕ್ರೀಡೆಗೆ ಹೆಚ್ಚು ಒತ್ತು ನೀಡುವುದು ನಮ್ಮ ಕರ್ತವ್ಯ. ಕ್ರೀಡಾಪಟುಗಳು ನಮ್ಮ ದೇಶದ ಆಸ್ತಿ, ನಮ್ಮ ಹೆಮ್ಮೆ. ದೇಶದಲ್ಲಿ ಸಾಕಷ್ಟು ಕ್ರೀಡಾ ಕೇಂದ್ರಗಳಿವೆ. ಕೆಲವೆಡೆ ಗುಣಮಟ್ಟ ಕಡಿಮೆ ಇದೆ. ಎಲ್ಲ ಕೇಂದ್ರ ವಿಶ್ವದ ಯಾವುದೇ ಕೇಂದ್ರಕ್ಕಿಂತ ಕಡಿಮೆ ಇರಬಾರದು. ಎಲ್ಲ ಮೂಲಸೌಕರ್ಯ ಗುಣಮಟ್ಟದ್ದಾಗಿರಬೇಕು. 3 star ಹೋಟೆಲ್ ನ ಗುಣಮಟ್ಟದ ಕ್ರೀಡಾ ವಸತಿ ನಿಲಯ ಮೂಲಸೌಕರ್ಯ ಇರಬೇಕು. ಪ್ರೊಪೆಷನಲ್ ಮ್ಯಾನೆಜ್ ಮೆಂಟ್ ಇರಬೇಕು. ಆಗ ಮಾತ್ರ 3star ಹೋಟೆಲ್ ನಂತೆ ಗುಣಮಟ್ಟದ ಸೇವೆ ಸಾಧ್ಯ. ಅದಕ್ಕಾಗಿ ಟೆಂಡರ್ ಕರೆದು ಮ್ಯಾನೇಜ್ ಮೆಂಟ್ ವ್ಯವಸ್ಥೆ ಮಾಡುತ್ತೇವೆ. ಕ್ರೀಡಾಪಟುಗಳಿಗೆ ಗುಣಮಟ್ಟದ ಆಹಾರ ವ್ಯವಸ್ಥೆ ಆಗಬೇಕು. ನಾವು ಅಂದುಕೊಂಡಷ್ಟು ವೇಗವಾಗಿ ಎಲ್ಲ ಸಾಧ್ಯವಿಲ್ಲ. ಆದರೂ ಪ್ರಯತ್ನ ಮಾಡುತ್ತೇವೆ. ಸಾಯಿ ಕ್ರೀಡಾಕೇಂದ್ರದಲ್ಲಿ ವಿವಿಧ ಕ್ರೀಡೆಗೆ ತರಬೇತಿ ನೀಡಲಾಗುತ್ತಿದೆ. ವಿಶೇಷವಾಗಿ ಒಲಂಪಿಕ್ ಗೆ ತೆರಳುತ್ತಿರುವ ಕ್ರೀಡಾಪಟುಗಳಿಗೆ , ವಿಶ್ವದ ಶ್ರೇಷ್ಠ ತರಬೇತುದಾರರನ್ನು ನೀಡಲು ನಾವು ಸಿದ್ಧ. ಭಾರತೀಯ ತರಬೇತುದಾರರೇ ವಿಶ್ವಮಟ್ಟದ ತರಬೇತುದಾರರಾಗಿ ರೂಪುಗೊಳ್ಳಬೇಕು. ವಿದೇಶಿ ಕೋಚ್ ಗಳಂತೆ ಭಾರತೀಯ ಕೋಚ್ ಗಳಿಗೂ ಉತ್ತಮ ವೇತನ ನೀಡುತ್ತೇವೆ. ಇಂದಿನ ಶ್ರೇಷ್ಠ ಕ್ರೀಡಾಪಟುಗಳು ಮುಂದೆ ಕೋಚ್ ಆಗಬೇಕು. ಮೊದಲಿನಂತೆ ಸಹಾಯಕ ಕೋಚ್ ಗೆ ಬಡ್ತಿ ಸಿಗಲು ತಡವಾಗುವುದಿಲ್ಲ. ನಮ್ಮ ದೇಶದಲ್ಲಿ ಸ್ಪೋರ್ಟ್ಸ್ ಸೈನ್ಸ್ ಮೊದಲಿನಿಂದಲೂ ಇದೆ. ಆದರೆ ಏನು ಪ್ರಯೋಜನವಾಗಿಲ್ಲ. ಈಗ ಅದಕ್ಕೆ ಹೆಚ್ಚಿನ ಶಕ್ತಿ ನೀಡುತ್ತಿದ್ದೇವೆ. ಪ್ರತಿ ರಾಜ್ಯ ಒಂದು ಕ್ರೀಡೆಗೆ ಆದ್ಯತೆ ನೀಡಬೇಕು. ಇದಕ್ಕೆ ಕೇಂದ್ರ ಸರ್ಕಾರ ಸಹಾಯ ಮಾಡುತ್ತದೆ, ಒಂದು ರಾಜ್ಯ ಒಂದು ದೇಶವಾಗಿ ಕೆಲಸ ಮಾಡಿದರೆ ನಾವು ಒಲಂಪಿಕ್ ನಲ್ಲಿ ಪದಕ ಗೆಲ್ಲಬಹುದು. ಕೇವಲ ಭಾಷಣ ಮಾಡುವುದರಿಂದ ಪದಕ ಗೆಲ್ಲಲು ಸಾಧ್ಯವಿಲ್ಲ. ಅದಕ್ಕೆ ಪರಿಶ್ರಮ ಮುಖ್ಯ ಎಂದರು.
ಕಳೆದ ಎರಡು ಏಷ್ಯನ್ ಗೇಮ್ಸ್ ನಲ್ಲಿ ಕಬಡ್ಡಿಯಲ್ಲಿ ಭಾರತ ಬಂಗಾರ ಪದಕ ಗೆದ್ದಿಲ್ಲ. ಈ ಬಾರಿ ಬಂಗಾರದ ಪದಕ ಗೆಲ್ಲಲೇಬೇಕು. ಆ ನಿಟ್ಟಿನಲ್ಲಿ ಶ್ರಮಿಸಿ ಎಂದು ಹೇಳಿದ್ದೇನೆ. ಸಾಯಿ ಸ್ಪೋರ್ಟ್ಸ್ ಸೆಂಟರ್ ಮಾದರಿ ಕೇಂದ್ರವಾಗಬೇಕು. ಕ್ರೀಡಾಪಟುಗಳು ಸದಾ ಖುಷಿಯಿಂದ ಇರಬೇಕು. ಕ್ರೀಡೆಯಲ್ಲಿ ಸೋಲು-ಗೆಲುವು ಸಹಜ. ಆದ್ರೆ ಜೀವನದಲ್ಲಿ ಎಂದೂ ಕ್ರೀಡಾಪಟುಗಳು ಸೋಲಬಾರದು, ದುಖಿಃತರಾಗಬಾರದು ಎಂದು ಸಚಿವ ಕಿರಣ್ ರಿಜಿಜು ಹೇಳಿದರು.
ಮುಂದಿನ ನಾಲ್ಕು ತಿಂಗಳಲ್ಲಿ ಇನ್ನೂ ಸಾಕಷ್ಟು ಕ್ರೀಡಾಪಟುಗಳು ಟೋಕಿಯೋ ಒಲಂಪಿಕ್ ಗೆ ಅರ್ಹತೆ ಪಡೆಯಲು ಅವಕಾಶ ಇದೆ. ಕ್ರೀಡಾಕೂಟದಲ್ಲಿ ಕ್ರೀಡಾಪಟುಗಳಿಗೆ ಎಲ್ಲ ವ್ಯವಸ್ಥೆ ನೋಡಿಕೊಳ್ಳಲು ತಾಂತ್ರಿಕ ತಂಡ ಇರುತ್ತದೆ. ಕ್ರೀಡಾ ಕ್ಷೇತ್ರದಲ್ಲಿ ಭಾರತ ಉತ್ತಮ ಸ್ಥಾನಕ್ಕೆ ತಲುಪಬೇಕು. 2028 ರಲ್ಲಿ ಅಮೇರಿಕಾದ ಲಾಸ್ ಎಂಜಲೀಸ್ ಒಲಂಪಿಕ್ ಕ್ರೀಡಾಕೂಟ ನಡೆಯಲಿದೆ. ಅದಕ್ಕೆ ನಾವು ಸಂಪೂರ್ಣ ಸಿದ್ಧತೆಯನ್ನು ಈಗಿನಿಂದಲೆ ಶುರುಮಾಡಬೇಕು. ಪದಕ ಪಟ್ಟಿಯಲ್ಲಿ ಭಾರತ ಟಾಪ್ 10 ರ ಒಳಗೆ ಇರಬೇಕು ಎಂದು ಅವರು ಹೇಳಿದರು.
ಇದಕ್ಕೂ ಮುನ್ನ ಮಾತನಾಡಿದ ಯುವ ಸಬಲೀಕರಣ ಮತ್ತು ಕ್ರೀಡೆ, ಯೋಜನೆ ಕಾರ್ಯಕ್ರಮ ಸಂಯೋಜನೆ ಹಾಗೂ ಸಾಂಖ್ಯಿಕ ಸಚಿವ ಡಾ. ನಾರಾಯಣಗೌಡ, ಕೇಂದ್ರ ಕ್ರೀಡಾ ಸಚಿವರ ಆಗಮನದಿಂದ ನಮಗೆ ಇನ್ನಷ್ಟು ಹುರುಪು ಬಂದಿದೆ. ನಿನ್ನೆಯಷ್ಟೆ ಶಿವಮೊಗ್ಗದ ಸಹ್ಯಾದ್ರಿ ಕಾಲೇಜಿನಲ್ಲಿ ಒಳಕ್ರೀಡಾಂಗಣಕ್ಕೆ ಶಂಕುಸ್ಥಾಪನೆ ನೆರವೇರಿಸಿದ್ದಾರೆ. ಕೇಂದ್ರ ಸಚಿವರ ಜೊತೆಗೂಡಿ ರಾಜ್ಯದಲ್ಲಿ ಕ್ರೀಡೆಗೆ ಹೆಚ್ಚಿನ ನೆರವು ನೀಡುತ್ತೇವೆ. 2022 ರಲ್ಲಿ ಖೇಲೊ ಇಂಡಿಯಾ ಅಂತಾರಾಜ್ಯ ವಿವಿ ಗಳ ಕ್ರೀಡಾಕೂಟ ಇದೆ. ಬೆಂಗಳೂರಿನಲ್ಲಿ ಈ ಕ್ರೀಡಾಕೂಟ ನಡೆಯುತ್ತಿದೆ. ರಾಜ್ಯ ಸರ್ಕಾರ ಅದಕ್ಕೆ ಬೇಕಾದ ಎಲ್ಲ ಸಹಕಾರ ನೀಡಲಿದೆ. ಒಲಂಪಿಕ್ ನಲ್ಲಿ ಕೂಡ ನಮ್ಮ ರಾಜ್ಯದಿಂದ ಸಾಕಷ್ಟು ಕ್ರೀಡಾಪಟುಗಳು ಭಾಗವಹಿಸಿ, ಸಾಧನೆ ಮಾಡುತ್ತಾರೆ ಎಂಬ ನಿರೀಕ್ಷೆ ಇದೆ. ಓಲಂಪಿಕ್ ಗೆ ಅರ್ಹತೆ ಪಡೆಯಲು ಇನ್ನೂ ನಾಲ್ಕು ತಿಂಗಳು ಸಮಯವಿದ್ದು, ಸಾಕಷ್ಟು ಕ್ರೀಡಾಪಟುಗಳು ಅರ್ಹತೆ ಪಡೆದು, ನಮ್ಮ ರಾಜ್ಯಕ್ಕೆ ದೇಶಕ್ಕೆ ಕೀರ್ತಿ ತರುತ್ತಾರೆ ಎಂಬ ಭರವಸೆ ಇದೆ ಎಂದು ಅವರು ಹೇಳಿದರು.
ಸಚಿವದ್ವಯರು ಸಾಯಿ ಸ್ಪೋರ್ಟ್ ಕೇಂದ್ರದಲ್ಲಿರುವ ಜಿಮ್, ಹಾಕಿ ಕ್ರೀಡಾಂಗಣ ಸೇರಿದಂತೆ ಎಲ್ಲ ಕ್ರೀಡಾ ಸೌಲಭ್ಯಗಳನ್ನು ವೀಕ್ಷಿಸಿದರು. ಇದೆ ವೇಳೆ ಕೇಂದ್ರ ಕ್ರೀಡಾ ಸಚಿವರು ಹಾಕಿ ಸ್ಟಿಕ್ ನಿಂದ ಬಾಲ್ ಹೊಡೆದು ಕ್ರೀಡಾಪಟುಗಳಿಗೆ ಉತ್ಸಾಹ ತುಂಬಿದರು.
ಬಿಲಿಯಡ್ಸ್ ವಿಶ್ವ ಚಾಂಪಿಯನ್ ಪಂಕಜ್ ಆಡ್ವಾನಿ, ಸಾಯಿ ಸ್ಪೋರ್ಟ್ಸ್ ನ ಮುಖ್ಯಸ್ಥರು, ಇಲಾಖೆಯ ಅಧಿಕಾರಿಗಳು, ಭಾರತೀಯ ಹಾಕಿ ತಂಡದ ನಾಯಕ್ ಮನ್ ಪ್ರೀತ್ ಸಿಂಗ್ ಮತ್ತಿತರರು ಉಪಸ್ಥಿತರಿದ್ದರು.
ಯುಎನ್ಐ ಎಎಚ್ 2030