Published
8 months agoon
ಬೆಂಗಳೂರು: ಜನೆವರಿ 04 (ಯು.ಎನ್.ಐ.) ನಾಟಕ ಕಲೆಯು ಎಲ್ಲಾ ಕಲೆಗಳ ಸಮ್ಮಿಲನ ಹೊಂದಿರುವ ವಿಶೇಷವಾದ ಕಲೆಗಳಲ್ಲಿ ಒಂದು. ಗ್ರಾಮಾಂತರ ಪ್ರದೇಶಗಳಿಗೂ ಹವ್ಯಾಸಿ ನಾಟಕ ಕಲೆಯನ್ನು ಪಸರಿಸುವ ನಿಟ್ಟಿನಲ್ಲಿ ಇತ್ತೀಚಿನ ಬೆಳವಣಿಗೆಗಳು ಸ್ವಾಗತಾರ್ಹ,” ಎಂದು ಖ್ಯಾತ ಕವಿ ಡಾ. ಬಿ.ಆರ್. ಲಕ್ಷ್ಮಣರಾವ್ ಹೇಳಿದರು.
ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಐಶ್ವರ್ಯ ಕಲಾನಿಕೇತನ ಸಂಸ್ಥೆ ಆಯೋಜಿಸಿದ್ದ ಆಷಾಢದ ಒಂದು ದಿನ ನಾಟಕ ಪ್ರದರ್ಶನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಂಗಳವಾರ ಅವರು ಮಾತನಾಡಿದರು.
“ಎಲ್ಲ ಕಲೆಗಳನ್ನು ಮಿಳಿತಗೊಂಡಂತಹ ನಾಟಕ ಕಲೆ ಬಹಳ ಪ್ರಮುಖವಾದದ್ದು. ಕವಿಯಾಗಿ ನಾನು ಪ್ರಸಿದ್ಧಿಯಾಗಿದ್ದರೂ ಒಂದೆರಡು ನಾಟಕಗಳನ್ನು ಕೂಡ ರಚಿಸಿದ್ದೇನೆ. ಕಾಳಿದಾಸನ ನಾಟಕದ ಮೇಲೆ ಆಧಾರಿತವಾಗಿರುವ ಈ ಪ್ರಸಿದ್ಧ ನಾಟಕವನ್ನು ಈ ಕಲಾತಂಡ ಬೆಂಗಳೂರಿನಲ್ಲಿ ಪ್ರದರ್ಶಿಸುತ್ತಿದೆ. ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಹವ್ಯಾಸಿ ನಾಟಕ ರಂಗವನ್ನು ಪ್ರಚುರಪಡಿಸುವಲ್ಲಿ ಐಶ್ವರ್ಯ ಕಲಾನಿಕೇತನ ಪ್ರಮುಖ ಪಾತ್ರ ವಹಿಸುತ್ತಿದೆ. ಗ್ರಾಮೀಣ ಪ್ರದೇಶದ ಪ್ರತಿಭೆಗಳಿಗೆ ಸೂಕ್ತವಾದ ವೇದಿಕೆಯನ್ನು ದೊರಕಿಸಿಕೊಡುವ ನಿಟ್ಟಿನಲ್ಲಿ ಇಂತಹ ಸಂಸ್ಥೆಗಳು ಇನ್ನಷ್ಟು ತೊಡಗಿಸಿಕೊಳ್ಳಬೇಕು,” ಎಂದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಸ್ವರ್ಣಭಾರತಿ ಸಹಕಾರ ಬ್ಯಾಂಕ್ನ ಅಧ್ಯಕ್ಷ ಡಾ. ಪಿ.ಎಲ್. ವೆಂಕಟರಾಮರೆಡ್ಡಿ, “ಜನರ ಮುಂದೆ ಪ್ರತಿ ಬಾರಿಯೂ ಫಿಸಿಕಲ್ ಅದಂತಹ ಅಪಿಯರೆನ್ಸ್ ಬೇಡುವ ಕಲೆ ನಾಟಕ. ನಮ್ಮ ಭಾಗದ ಜನರಲ್ಲಿರುವ ಪ್ರತಿಭೆಗಳಿಗೆ ಸೂಕ್ತ ವೇದಿಕೆ ನೀಡುವಲ್ಲಿ ಐಶ್ವರ್ಯ ಕಲಾನಿಕೇತನ ಸಂಸ್ಥೆ ಕಾರ್ಯಪ್ರವೃತ್ತವಾಗಿದೆ. ವೃತ್ತಿ ರಂಗ ಕಲೆ ಇಂದು ಕ್ರಮೇಣ ಕ್ಷೀಣಿಸುತ್ತಿದೆ. ಆದರೆ, ಇಂತಹ ಹವ್ಯಾಸಿ ರಂಗತಂಡಗಳು ಬೇಸಿಗೆ ಶಿಬಿರಗಳು ಹಾಗೂ ನಾಟಕ ಪ್ರದರ್ಶನದ ಮೂಲಕ ಗ್ರಾಮಾಂತರ ಪ್ರದೇಶಕ್ಕೆ ನಾಟಕ ಕಲೆಯನ್ನು ತೆಗೆದುಕೊಂಡು ಹೋಗುತ್ತಿರುವುದು ನಿಜವಾಗಿಯೂ ಮೆಚ್ಚುವಂತಹ ಸಾರ್ಥಕ ಕೆಲಸ” ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಸಹನಾ ಸೋಮಶೇಖರ್ ನಿರ್ದೇಶಿಸಿರುವ ಸಿದ್ದಲಿಂಗ ಪಟ್ಟಣಶೆಟ್ಟಿ ಅವರ ಅನುವಾದದ `ಆಷಾಢದ ಒಂದು ದಿನ’ ನಾಟಕವನ್ನು ಅವರ ಬೆಂಗಳೂರಿನ ಕಾಲೇಜು ವಿದ್ಯಾರ್ಥಿಗಳಿಂದ ಪ್ರದರ್ಶಿಸಲಾಯಿತು. ಚಲನಚಿತ್ರ ನಿರ್ಮಾಪಕರು ಹಾಗೂ ಉದ್ಯಮಿ ಜಿ.ಎನ್. ಮೂರ್ತಿ, ಪತ್ರಕರ್ತ ಗಂಡಸಿ ಸದಾನಂದಸ್ವಾಮಿ ಮತ್ತಿತರರು ಉಪಸ್ಥಿತರಿದ್ದರು.